ನನ್ನ ಮೇಲೆ ರೈತರ ಋಣವಿದೆ, ಕಾಂಗ್ರೆಸ್ನವರದ್ದಲ್ಲ: ಹೆಚ್.ಡಿ. ಕುಮಾರಸ್ವಾಮಿ ಕಿಡಿ | Janata news
ರಾಮನಗರ : ನನ್ನ ಮೇಲೆ ರೈತರ ಋಣ ಇದೆಯೇ ಹೊರತು ಬೇರೆ ಯಾರ ಋಣವೂ ಇಲ್ಲ. ನಾನು ಯಾರ ಋಣದಲ್ಲಿಯೂ ಇಲ್ಲ. ನನ್ನನ್ನ ಸಿಎಂ ಮಾಡಿ ಎಂದು ಯಾರ ಮನೆ ಬಾಗಿಲಿಗೂ ಹೋಗಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಚನ್ನಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲ ನಾಯಕರು ರಾಮನಗರದಲ್ಲಿ ಕಾಂಗ್ರೆಸ್ ಪಕ್ಷವನ್ನ ಅಧಿಕಾರಕ್ಕೆ ತರಲು ಹೊರಟಿದ್ದಾರೆ ಎಂದು ಮಾಜಿ ಶಾಸಕ ಹೆಚ್.ಸಿ.ಬಾಲಕೃಷ್ಣ ವಿರುದ್ಧ ವಾಗ್ದಾಳಿ ನಡೆಸಿದರು.
ಕೆಲವರು ಕುಮಾರಸ್ವಾಮಿ ಅವರನ್ನ ಉಳಿಸಿದ್ದೇ ನಾವು ಎಂದು ಪ್ರಚಾರ ಪಡೆದುಕೊಂಡಿದ್ದಾರೆ ಅಂತಾನು ಗೊತ್ತು. ಇದೀಗ ನಮ್ಮ ಪಕ್ಷ ಮುಗಿಸುತ್ತೇವೆ ಎಂದು ಕೆಲವರು ಹೊರಟಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ನಾಯಕರ ಹೆಸರು ಹೇಳದೆ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ಕಳೆದ ವಿಧಾನಸಭಾ ಚುನಾವಣೆ ಫಲಿತಾಂಶದ ನಂತರ ನಾನು ಯಾರ ಮನೆಗೂ ಹೋಗಿರಲಿಲ್ಲ. ಕಾಂಗ್ರೆಸ್ ನಾಯಕರೇ ನನ್ನ ಮನೆಗೆ ಬಂದಿದ್ದರು. ಸಿಎಂ ಸ್ಥಾನವನ್ನು ನೀವೆ ವಹಿಸಿಕೊಳ್ಳಿ. ಮೋದಿಯವರು 4 ವರ್ಷ ನಿಮಗೆ ಏನು ಸಮಸ್ಯೆ ನೀಡದಂತೆ ನಾವು ನೋಡಿಕೊಳ್ತೀವಿ ಎಂದಿದ್ದರು. ಕಾಂಗ್ರೆಸ್ ನವರಿಗೆ ಮೈತ್ರಿ ಬೇಕಿತ್ತು, ನನಗೆ ರೈತರ ಋಣ ಇತ್ತು. ಹಾಗಾಗಿ 14 ತಿಂಗಳಲ್ಲಿ 25 ಸಾವಿರ ಕೋಟಿ ಸಾಲ ಮನ್ನಾ ಮಾಡಿದೆ. ಆ ರೈತನ ಋಣ ತೀರಿಸಬೇಕಿತ್ತು, ತೀರಿಸಿದ್ದೇನೆ. ಹಿಂಬಾಗಿಲಿನಿಂದ ಯಾವತ್ತು ರಾಜಕಾರಣ ಮಾಡಿಲ್ಲ ನಾನು ಸಹ ಅಂತ ರಾಜಕಾರಣಕ್ಕೆ ಎಡೆ ಮಾಡಿಕೊಡುವುದಿಲ್ಲ ಎಂದು ಹೆಚ್ಡಿಕೆ ಸ್ಪಷ್ಟಪಡಿಸಿದರು.